ಮೊದಲೇ ಸ್ಪಷ್ಟಪಡಿಸಿಬಿಡುತ್ತೇನೆ. ಜನಾರ್ದನರೆಡ್ಡಿಯವರ ಬಂಧನಕ್ಕೂ ಕರ್ನಾಟಕಕ್ಕೂ ಯಾವುದೇ ಸಂಬಂಧವಿಲ್ಲ, ಆಂಧ್ರಪ್ರದೇಶ ಸರ್ಕಾರದ ಮನವಿ ಮೇರೆಗೆ ಆಂಧ್ರಪ್ರದೇಶದ ನೆಲದಲ್ಲಿ ಆಗಿರುವ ಅಕ್ರಮ ಗಣಿಗಾರಿಕೆಯ ಬಗ್ಗೆ ಸಿಬಿಐ ನಡೆಸಿದ ತನಿಖೆಯ ಫಲಸ್ವರೂಪ ಈ ಬಂಧನ. ಅಂದರೆ ಕರ್ನಾಟಕದಲ್ಲಿ ನಡೆದಿರುವ ಅವ್ಯವಹಾರಗಳು ಈ ಬಂಧನದಿಂದ ಪ್ರತ್ಯೇಕವಾಗಿಯೇ ಉಳಿದಿವೆ. ಅಂದರೆ ಈಗ ಆಗಿರುವುದು ಆರಂಭ ಮಾತ್ರ. ಮುಂದೆ ಇದೆ ನಿಜವಾದ ಮಾರಿಹಬ್ಬ.
ಇಷ್ಟಕ್ಕೂ ರೆಡ್ಡಿಯವರ ಬಂಧನವಾಗಿರುವುದು ಏಕೆ? ಆಂಧ್ರಪ್ರದೇಶದಲ್ಲಿ ರಾಜಶೇಖರರೆಡ್ಡಿ ಸರ್ಕಾರ ಪತನಗೊಂಡ ನಂತರ ಅವರ ಮಗ ಜಗನ್ ಮೋಹನ್ ರೆಡ್ಡಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬ ಒತ್ತಾಯ ಪಕ್ಷದ ಬಹುಸಂಖ್ಯಾತ ಸದಸ್ಯರಿಂದ ಬಂತು. ಇದನ್ನು ನಿರೀಕ್ಷಿಸದೇ ಇದ್ದ ಕಾಂಗ್ರೆಸ್ ಹೈಕಮಾಂಡ್ ಪ್ರಥಮ ಭಾರಿಗೆ ಜಗನ್ ಹಿನ್ನಲೆಯನ್ನು ಕೆದಕ ಹೊರಟಾಗ ಹಲವು ಆಶ್ಚರ್ಯಕರ ಸಂಗತಿಗಳು ಕಣ್ಣಿಗೆ ಕಾಣತೊಡಗಿದವು. ರಾಜಶೇಖರರೆಡ್ಡಿ ಅಧಿಕಾರದಲ್ಲಿದ್ದಾಗ ನಡೆಸಿದ ಅಪಾರ ಪ್ರಮಾಣದ ಭ್ರಷ್ಟಾಚಾರ ಹಾಗೂ ಅದೇ ತಾನೇ ಎದ್ದಿದ್ದ ಚೀನಾ ಬೂಮ್ ನಲ್ಲಿ ಹೇರಳವಾದ ಕಬ್ಬಿಣದ ಅದಿರು ಅಕ್ರಮವಾಗಿ ಸಾಗಿಸಿ ಹಲವು ಸಾವಿರ ಕೋಟಿ ರೂಪಾಯಿಗಳ ಧನವಂತರಾಗಿದ್ದರು. ಸುಮಾರು ೪೨೦೦೦ ಕೋಟಿ ಎಂದು ಅಂದಾಜು ಮಾಡಲಾಗಿರುವ ಈ ಅಕ್ರಮ ಸಂಪತ್ತಿನ ಏಕೈಕ ವಾರಸುದಾರರು ಜಗನ್ಮೋಹನ್ರೆಡ್ಡಿ ಆಗಿದ್ದರು. ರಾಜಕೀಯದಲ್ಲಿ ಅತ್ಯಾಸಕ್ತಿ ಇರಿಸಿಕೊಂಡಿದ್ದ ಜಗನ್ ಅಪ್ಪ ಮುಖ್ಯಮಂತ್ರಿಯಾಗಿ ತೆರವು ಮಾಡಿದ ಕಡಪ ಕ್ಷೇತ್ರದಲ್ಲಿ ಸ್ಪರ್ಧಿಸಿ ಲೋಕಸಭೆ ಸದಸ್ಯರೂ ಆಗಿದ್ದರು. ಅಷ್ಟೇ ಅಲ್ಲ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದ ಬಹುತೇಕ ಪಕ್ಷದ ಅಭ್ಯರ್ಥಿಗಳಿಗೆ ದಾರಾಳ ಹಣಕಾಸಿನ ನೆರವು ನೀಡಿ ಅವರನ್ನು ತಮ್ಮ ಹಸ್ತಕರಂತೆ ಮಾಡಿಕೊಂಡಿದ್ದರು.
ಜಗನ್ ಪ್ರಭಾವವನ್ನು ಗುರುತಿಸಲು ಎಡವಿದ ಹೈಕಮಾಂಡ್ ಅನುಭವಿ ಸಚಿವ ರೋಷಯ್ಯರವರನ್ನು ಮುಖ್ಯಮಂತ್ರಿ ಮಾಡಿತ್ತು. ಮುಖ್ಯಮಂತ್ರಿಯ ಸ್ಥಾನದ ಕನಸು ಕಾಣುತ್ತಿದ್ದ ಜಗನ್ ಬೆಂಬಲಿಗರಿಗೆ ಇದರಿಂದ ಶಾಕ್ ಆಯಿತು. ಮುಂದಿನ ವಿದ್ಯಮಾನಗಳಲ್ಲಿ ಜಗನ್ ಮತ್ತವರ ಬೆಂಬಲಿಗರು ಕಾಂಗ್ರೆಸ್ ವಿರುದ್ಧ ಬಂಡೆದ್ದು ತಮ್ಮದೇ ವೈಎಸ್ಆರ್ ಕಾಂಗ್ರೆಸ್ ಎಂಬ ಹೊಸ ಪಕ್ಷ ಹುಟ್ಟುಹಾಕಿದರು ಮರಳಿ ಚುನಾವಣೆ ಗೆದ್ದರು.
ಬಳ್ಳಾರಿ ಮಾಜಿ ಕಾನ್ಸ್ಟೇಬಲ್ ಒಬ್ಬರ ಮಕ್ಕಾಳಾಗಿದ್ದ ಜನಾರ್ದರೆಡ್ಡಿ ಸಹೋದರರು ಹೇಗೆ ರಾಜಶೇಖರ ರೆಡ್ಡಿಯವರ ಬಿಜಿನೆಸ್ ಪಾಟ್ನರ್ ಆದರು ಎಂಬ ರಹಸ್ಯ ಅವರಿಗಷ್ಟೇ ಗೊತ್ತು. ಓಬಳಾಪುರಂ ಮೈನಿಂಗ್ ಕಂಪನಿ ಹಾಗೂ ಅನಂತಪುರ ಮೈನಿಂಗ್ ಕಂಪನಿಗಳು ಎಂದು ಎರಡು ಕಂಪನಿಗಳನ್ನು ಹುಟ್ಟುಹಾಕಿ ರೆಡ್ಡಿ ಪಾಲುದಾರರು ಕರ್ನಾಟಕ ಹಾಗೂ ಆಂಧ್ರಪ್ರದೇಶಗಳೆರಡರಲ್ಲೂ ಗಣಿಗಾರಿಕೆ ನಡೆಸತೊಡಗಿದರು. ರೆಡ್ಡಿ ಸಹೋದರರಿಗೆ ಅಕ್ರಮ ಗಣಿಗಾರಿಕೆಯಲ್ಲಿ ತೊಂದರೆಯಾದಾಗಲೆಲ್ಲ ವೈಎಸ್ಆರ್ ಅವರ ಬೆಂಬಲಕ್ಕೆ ತಮ್ಮ ರೌಡಿ ಪಡೆಯನ್ನು ಕಳುಹಿಸತೊಡಗಿದರು. ಅಷ್ಟೇ ಅಲ್ಲ ಬ್ರಹ್ಮಣಿ ಉಕ್ಕು ಕಾರ್ಖಾನೆ ಸ್ಥಾಪನೆಗಾಗಿ ರಾಜಶೇಖರರೆಡ್ಡಿ ೧೦೭೬೦ ಎಕರೆ ಜಮೀನನ್ನು ಎಕರೆಗೆ ೧೮,೦೦೦ ರೂಗಳಂತೆ ಮಂಜೂರು ಮಾಡಿಸಿದ್ದರು.
ಕರ್ನಾಟಕ ಹಾಗೂ ಆಂಧ್ರಪ್ರದೇಶ ಗಡಿಭಾಗದಲ್ಲಿದ್ದ ಸಮೃದ್ದ ಅದಿರು ಹೊಂದಿದ್ದ ಸಾವಿರಾರು ಎಕರೆ ಅರಣ್ಯ ಪ್ರದೇಶ ರೆಡ್ಡಿದ್ವಯರ ಕಣ್ಣಿಗೆ ಬಿತ್ತು. ಅದನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ಬೌಂಡರಿ ಕಲ್ಲುಗಳನ್ನು ಕಿತ್ತುಹಾಕಿ ರಾಜಾರೋಷವಾಗಿ ಗಣಿಗಾರಿಕೆ ನಡೆಸಿದರು. ಕರ್ನಾಟಕ ಅಧಿಕಾರಿಗಳು ಬಂದರೆ ಇದು ಆಂಧ್ರದ ನೆಲವೆಂತಲೂ, ಆಂಧ್ರದ ಅಧಿಕಾರಿಗಳು ಬಂದರೆ ಇದು ಕರ್ನಾಟಕದ ನೆಲವೆಂತಲೂ ಸಮಜಾಯಿಸಿಕೊಡುತ್ತಾ ವರ್ಷಾನುಗಟ್ಟಲೆ ಗಣಿಗಾರಿಕೆ ನಡೆಸಿ ಕೋಟಿಗಟ್ಟಲೆ ಟನ್ ಅದಿರನ್ನು ವಿದೇಶಗಳಿಗೆ ಅಕ್ರಮವಾಗಿ ಸಾಗಿಸಿದರು. ಕರ್ನಾಟಕ ಹಾಗೂ ಆಂಧ್ರಪ್ರದೇಶ ಸರ್ಕಾರದ ಯಾವತ್ತೂ ಅಧಿಕಾರಿಗಳು ರೆಡ್ಡಿ ಕಂಪನಿಗಳು ದಾರಾಳವಾಗಿ ನೀಡುತ್ತಿದ್ದ ಎಂಜಲು ಕಾಸಿನ ಆಸೆಗೆ ಬಲಿಯಾಗಿ ಅವರ ಅಕ್ರಮ ಚಟುವಟಿಕೆಗಳು ಸುಗಮವಾಗಿ ನಡೆಯುವಂತೆ ನೆರವಾದರು.
ಬಳ್ಳಾರಿಯ ನೆಲದಲ್ಲಿ ಪತ್ರಿಕೆಯೊಂದನ್ನು ನಡೆಸಿಕೊಂಡು ಲೇವಾದೇವಿ ಸಂಸ್ಥೆ ನಡೆಸಿ ರಾಯಲ್ ಸರ್ಕಲ್ಲಿನ ವ್ಯಾಪಾರಸ್ಥರಿಗೆ ಮೀಟರ್ ಬಡ್ಡಿ ಮೇಲೆ ಸಾಲ ನೀಡುತ್ತಿದ್ದ ರೆಡ್ಡಿ ಸಹೋದರರಿಗೆ ವೈಎಸ್ಆರ್ ರವರ ರಾಜಕೀಯ ಬೆಂಬಲ, ಶ್ರೀ ರಾಮುಲು ಎಂಬ ಪುಡಿ ರೌಡಿಯ ತೋಳು ಬಲ ಸಿಕ್ಕಿದಾಗ ಅವರ ಸಾಮ್ರಾಜ್ಯ ಎಲ್ಲೆ ಮೀರಿ ವಿಸ್ತರಿಸತೊಡಗಿತು. ಹಲವು ಹತ್ತು ಗಣಿ ಉದ್ದಿಮೆಗಳಿಗೆ ಏನಕೇನ ಪ್ರಕಾರೇಣ ಅವರ ಕುಟುಂಬ ಒಡೆಯರಾದವು. ಗುಡಿ ಗುಡಾರಗಳೆನ್ನದೆ, ಸರ್ಕಾರಿ-ಖಾಸಗಿ ಎಂದು ತಾರತಮ್ಯ ಮಾಡದೆ, ಬೆಟ್ಟ ದಿಣ್ಣೆ ಗುಡ್ಡಗಳ ಮೋರೆ ನೋಡದೆ ತಮ್ಮ ಲೂಟಿಯನ್ನು ಜಿಲ್ಲೆಯಾದ್ಯಂತ ವಿಸ್ತರಿಸಿಕೊಂಡರು. ಬಳ್ಳಾರಿಯ ಸಣ್ಣ ನ್ಯಾಯಾಲಯದಿಂದ ಹಿಡಿದು ಸುಪ್ರೀಂ ಕೋರ್ಟಿನ ತನಕ ಹಲವು ನೂರು ಮೊಕದ್ದಮೆಗಳನ್ನು ಸೃಷಿಸಿಕೊಂಡು ತಮ್ಮ ಪರ ವಾದಿಸುವ ವಕೀಲರ ಪಡೆಯೊಂದನ್ನು ಸೃಷ್ಟಿಸಿಕೊಂಡರು. ಎಷ್ಟೋ ಮಂದಿ ಗಣಿ ಮಾಲೀಕರು ಇವರ ಅಟಾಟೋಪಗಳಿಗೆ ಹೆದರಿಕೊಂಡು ಬಳ್ಳಾರಿ ಖಾಲಿ ಮಾಡಿದರು. ಬಳ್ಳಾರಿಯ ನೆಲದಲ್ಲಿ ಗಣಿಗಾರಿಕೆ ಮಾಡಿಕೊಂಡಿರಬೇಕಾದರೆ ರೆಡ್ಡಿ ಸಹೋದರರಿಗೆ ಒಂದೋ ಹಫ್ತಾ ಕೊಡಬೇಕು ಇಲ್ಲವೇ ಗಣಿ ಮಾರಿ ಹೊರಹೋಗಬೇಕೆಂಬ ಪರಿಸ್ಥಿತಿ ಉಂಟಾಗಿತ್ತು. ಅಯಾಚಿತವಾಗಿ ಅಪಾರ ಹಣ ಸಂಗ್ರಹ ಆಗುತ್ತಾ ಬಂದಂತೆಲ್ಲ ರೆಡ್ಡಿ ಸಹೋದರರ ಸಾರ್ವಜನಿಕ ಸೇವೆಯ ಹಂಬಲ ಪ್ರಕಟಗೊಳ್ಳತೊಡಗಿತು. ಮೊದಲಿಗೆ ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡೇ ಸಾಮೂಹಿಕ ಮದುವೆ, ವರಮಹಾಲಕ್ಷ್ಮಿ ಪೂಜೆಗಳಂತಹ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಅವರು ಕಾಂಗ್ರೆಸ್ ಪಕ್ಷದಿಂದಲೇ ತಮ್ಮ ರಾಜಕೀಯ ಪ್ರವೇಶ ಮಾಡಿದರೂ ಅಂದಿನ ಕಾಂಗ್ರಸ್ ನಾಯಕರಾದ ಅಲ್ಲಂ ವೀರಭದ್ರಪ್ಪ ಮತ್ತಿತರರು ಅವರ ಮಹತ್ವವನ್ನು ಅರಿತುಕೊಳ್ಳುವಲ್ಲಿ ವಿಳಂಬ ಮಾಡಿದರು.
ಆ ವೇಳೆಗೆ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ದಿಸಲು ಕಾಂಗ್ರೆಸ್ ವರಿಷ್ಠ ನಾಯಕಿ ಸೋನಿಯಾ ಗಾಂಧಿ ಕಾಲಿಟ್ಟರು. ಅವರ ವಿರುದ್ಧ ಸ್ಪರ್ದಿಸಲು ಬಿಜೆಪಿ ಅಭ್ಯರ್ಥಿಯಾಗಿ ಸುಷ್ಮಾ ಸ್ವರಾಜ್ ಬಳ್ಳಾರಿ ನೆಲಕ್ಕೆ ಕಾಲಿಟ್ಟಾಗ ರೆಡ್ಡಿ ಸಹೋದರರು ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿ ಬಂದಿತ್ತು. ಸೋನಿಯಾ-ಸುಷ್ಮಾ ನಡುವಿನ ಈ ಐತಿಹಾಸಿಕ ಕಾಳಗ ಸುಷ್ಮಾ ಪರಾಭವದಲ್ಲಿ ಅಂತ್ಯಗೊಂಡಿತ್ತಾದರೂ ಬಳ್ಳಾರಿ ನೆಲದಲ್ಲಿ ರೆಡ್ಡಿ ಸಹೋದರರಿಗೆ ಪ್ರಬಲ ರಾಜಕೀಯ ನೆಲೆದಾಣವನ್ನು ರೂಪಿಸಿಕೊಟ್ಟಿತು. ೨೦೦೪ರ ವಿಧಾನಸಭಾ ಚುನಾವಣೆಯ ವೇಳೆಗಾಗಲೇ ರೆಡ್ಡಿ ಸಹೋದರರು ಭಾಜಪದಲ್ಲಿ ಎರಡನೆ ದರ್ಜೆಯ ನಾಯಕರಾಗಿ ಗುರುತಿಸಲ್ಪಟ್ಟರಲ್ಲದೆ ಬಿಜೆಪಿಯ ಶಾಸಕ ಬಲ ೭೦ರ ಸಮೀಪ ಬರಲು ಅವರೇ ಕಾರಣೀಭೂತರಾದರು. ಕೇವಲ ೨ವರ್ಷಗಳ ಅವಧಿಯಲ್ಲಿ ಬಳ್ಳಾರಿಯ ರಾಜಕಾರಣದ ಚಿತ್ರಣವನ್ನು ಬದಲಿಸಿದ ರೆಡ್ಡಿ ಸಹೋದರರು ಬಳ್ಳಾರಿ ನಗರಸಭೆಯಿಂದ ಹಿಡಿದು, ವಿಧಾನ ಸಭೆ, ವಿಧಾನ ಪರಿಷತ್ತ್ ಹಾಗೂ ಸಂಸತ್ನಲ್ಲಿ ಪ್ರತಿಷ್ಠಾಪನೆಗೊಂಡರು.
೨೦೦೪-೦೮ ದಾಸರು ಹೇಳುವಂತೆ ರೆಡ್ಡಿಗಳಿಗೆ ಸುವರ್ಣಕಾಲ. ರಾಜ್ಯದಲ್ಲಿಯೇ ಪ್ರಥಮವೆನಿಸಿದ ಕಾಂಗ್ರೆಸ್ ಜನತಾದಳ ಸಮಿಶ್ರ ಸರ್ಕಾರದ ಅವಧಿಯಲ್ಲಿ ರೆಡ್ಡಿ ಸಹೋದರರು ದಾಖಲೆ ಪ್ರಮಾಣದಲ್ಲಿ ಬೆಳೆದರು. ಹಣ, ಅಧಿಕಾರ ಹಾಗೂ ಪ್ರಚಾರ ಎಲ್ಲವನ್ನು ಸಮರ್ಥವಾಗಿ ಬೆಳಸಿಕೊಂಡು ಅಧಿಕಾರಸ್ಥರನ್ನು ಒಲೈಸುತ್ತಾ ಅಧಿಕಾರಿ, ಮಾಧ್ಯಮದವರಿಗೆ ಬಿಸ್ಕೇಟ್ ಹಾಕುತ್ತಾ ಹೇಗೆ ಪ್ರವರ್ಧಮಾನಕ್ಕೆ ಬರುವುದು ಎಂಬುದಕ್ಕೆ ರೆಡ್ಡಿ ಸಹೋದರರು ಜ್ವಲಂತ ಉದಾಹರಣೆ. ರೆಡ್ಡಿ ಸಹೋದರರಿಂದ ಉಪಕೃತರಾಗದ ರಾಜಕಾರಣಿ, ಅಧಿಕಾರಿ ಇಲ್ಲವೇ ಮಾಧ್ಯಮ ಮಿತ್ರರು ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ಎಷ್ಟು ಮಂದಿ ಉಳಿದಿದ್ದಾರೆ ಎಂಬುದನ್ನು ದುರ್ಬೀನು ಹಾಕಿಕೊಂಡು ನೋಡಬೇಕು. ಕುಮಾರಸ್ವಾಮಿಗೆ ೧೫೦ ಕೋಟಿ ಲಂಚ ನೀಡಿದ ವೀಡಿಯೋ ಪ್ರದರ್ಶಿಸುತ್ತೇವೆಂದು ಹೇಳಿ ವಿಶ್ವ ಮಟ್ಟದಲ್ಲೂ ಪ್ರಚಾರ ಗಿಟ್ಟಿಸಿಕೊಂಡರು, ಅಷ್ಟೇ ಹೊರತಾಗಿ ವೀಡಿಯೋ ಮಾತ್ರ ಹೊರ ಬರಲೇ ಇಲ್ಲ.
ಈ ಎಲ್ಲ ರಾಜಕೀಯ ದೊಂಬರಾಟಗಳ ನಡುವೆಯೂ ರೆಡ್ಡಿ ಸಹೋದರರು ತಮ್ಮ ಅಕ್ರಮ ಸಂಪತ್ತನ್ನು ಹೆಚ್ಚಿಸಿಕೊಳ್ಳುತ್ತಾ ನಡೆದರು. ದಾಖಲೆಗಳನ್ನು ತಿರುಚುವುದು, ಅಧಿಕಾರಿಗಳನ್ನು ಹೆದರಿಸುವುದು, ಇತರರ ಜಮೀನುಗಳನ್ನು ಬಲಾತ್ಕಾರವಾಗಿ ಕಬ್ಜಾ ಮಾಡಿಕೊಂಡು ಗಣಿಗಾರಿಕೆ ನಡೆಸುವುದು. ರಾಜಧನ ನೀಡದೆ ರಾಜಾರೋಷವಾಗಿ ಅಕ್ರಮ ಸಾಗಣೆ ನಡೆಸುವುದು. ಬೇನಾಮಿ ವ್ಯವಹಾರ, ರಫ್ತು ವ್ಯವಹಾರದ ಎಲ್ಲಾ ನಿಯಮಗಳನ್ನು ಉಲ್ಲಂಘಿಸುವುದು, ತಮಗೆ ಮಣಿಯದ ಅಧಿಕಾರಿಗಳನ್ನು ಒಕ್ಕಲೆಬ್ಬಿಸುವುದು, ತಮಗೆ ಬೇಕಾದ ಅಧಿಕಾರಿಗಳನ್ನು ಪ್ರತಿಷ್ಠಾಪಿಸಿಕೊಳ್ಳುವುದು... ಹೀಗೆ ರೆಡ್ಡಿಯವರೆಂದರೆ ಬಳ್ಳಾರಿ, ಬಳ್ಳಾರಿ ಎಂದರೆ ರೆಡ್ಡಿ ಎಂಬಂತಾಯಿತು.
ರೆಡ್ಡಿ ಕುಟುಂಬದವರ ಅಕ್ರಮ ಗಣಿಗಾರಿಕೆಯ ಬಗ್ಗೆ ವಿವರಗಳನ್ನು ತಮ್ಮ ವರದಿಯ ಹತ್ತು ಅಧ್ಯಾಯಗಳಲ್ಲಿ ಹಿಡಿದಿಟ್ಟಿರುವ ಲೋಕಾಯುಕ್ತರು ಹೇಳುವಂತೆ ಬಳ್ಳಾರಿಯ ಮಟ್ಟಿಗೆ ಹೇಳುವುದಾದರೆ, ಅಲ್ಲಿ ಯಾವುದೇ ಕಾಯ್ದೆ ಕಾನೂನು ಇಲ್ಲ, ಅಲ್ಲಿರುವುದು ಒಂದೇ ರೆಡ್ಡಿ ಕಾನೂನು. ಅಲ್ಲಿ ರೆಡ್ಡಿಯೇ ಸರ್ವಸ್ವವೂ. ಬೇರೆ ಸರ್ಕಾರಕ್ಕೆ ಅಲ್ಲಿ ಜಾಗವೇ ಇಲ್ಲ. ರೆಡ್ಡಿ ಕುಟುಂಬದ ರಾಜಕೀಯ ವಿರೋಧಿಗಳು ಬಳ್ಳಾರಿಯ ನೆಲದ ಮೇಲೆ ಕಾಲಿಡಲು ಕೂಡ ಹತ್ತು ಬಾರಿ ಯೋಚಿಸಬೇಕಾಗಿತ್ತು.
ಹೀಗೆ ಬೆಳೆದು ಬಂದ ರೆಡ್ಡಿ ಹಣದ ಪ್ರಭಾವವನ್ನು ಬಿಜೆಪಿ ಸಮರ್ಥವಾಗಿ ಬಳಸಿಕೊಂಡಿತು. ೨೦೦೮ರ ವಿಧಾನಸಭಾ ಚುನಾವಣೆಗಳಲ್ಲಿ ಈ ಉತ್ತರ ಕರ್ನಾಟಕ ಭಾಗದ ೬೦ಕ್ಕೂ ಹೆಚ್ಚು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆರಿಸುವಲ್ಲಿ ರೆಡ್ಡಿಗಳದೇ ಅಂತಿಮ ಮಾತು. ಪ್ರಚಾರಕ್ಕೆ ಅವರದೇ ಹಣ. ಹಳ್ಳಿ ಹಳ್ಳಿಗಳಲ್ಲು ಸಾವಿರ ರೂಪಾಯಿಗಳ ಕೆಂಪು ನೋಟುಗಳು ಸುಲಲಿತವಾಗಿ ಹರಿದಾಡತೊಡಗಿದವು. ಓಟಿಗಿಷ್ಟು ಎಂದು ಹಣ ನಿಗದಿಯಾಗಿ ತೆರಬೇಕಾಗಿ ಬಂದದ್ದು ಈ ಚುನಾವಣೆಯಲ್ಲಿಯೇ.
ಅಂತೂ ಇಂತೂ ೨೨೪ ಸದಸ್ಯರ ಪೈಕಿ ಬಿಜೆಪಿ ಪಕ್ಷಕ್ಕೆ ೧೧೦ ಸದಸ್ಯರನ್ನು ಗೆಲ್ಲಿಸಿಕೊಡುವಲ್ಲಿ ರೆಡ್ಡಿ ಸಹೋದರರ ಪಾಲು ಅತೀ ಮಹತ್ವದ್ದು. ೨೦೦೮ರ ಚುನಾವಣೆಯ ನಂತರ ಮೊದಲ ಬಾರಿ ಅಧಿವೇಶನ ಸೇರಿದಾಗ ಅಂದಿನ ಪ್ರತಿ ಪಕ್ಷದ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಆಡಿದ ಮಾತುಗಳು ಅತ್ಯಂತ ಮಾರ್ಮಿಕವಾಗಿತ್ತು. ಈ ಚುನಾವಣೆಯಲ್ಲಿ ಕೆಂಪು ನೋಟುಗಳ ಭರಾಟೆ. ಅದು ಎಲ್ಲಿಂದ ಬಂದಿತೋ ಗೊತ್ತಿಲ್ಲ. ಹಳ್ಳಿ ಹಳ್ಳಿಗಳಲ್ಲೂ ಕೆಂಪು ನೋಟುಗಳು ಹರಿದಾಡುತ್ತಿದ್ದವು. ಅದೇನು ಗಣ್ಯಾಗಿಂದ ಬಂದರೆ ನೋಟುಗಳು ಕೆಂಪಾಗುತ್ತವೋ ಗೊತ್ತಿಲ್ಲ. ಈ ಕೆಂಪು ನೋಟುಗಳ ಹಾವಳಿಯಲ್ಲಿ ನಾವೆಲ್ಲರೂ ಗೆದ್ದು ಬರುವುದೇ ಸಾಹಸವಾಗಿತ್ತು.
ಅಂತೂ ಇಂತೂ ಸ್ಥಾಪನೆಯಾದ ಬಿಜೆಪಿ ಸರ್ಕಾರಕ್ಕೆ ರೆಡ್ಡಿ ಸಹೋದರರೇ ಸೂತ್ರಧಾರರು. ಮುಖ್ಯಮಂತ್ರಿ ಕೂಡ ಆಸೆ ಆಮಿಷಗಳಿಗೆ ತಕ್ಕಂತೆ ಇಚ್ಚಾನಿಚ್ಚೆಗಳಿಗೆ ಅನುಗುಣವಾಗಿ ಅಧಿಕಾರ ನಡೆಸತೊಡಗಿದರು. ಸುಷ್ಮಾ ಸ್ವರಾಜ್ ರವರ ಆಶೀರ್ವಾದಗಳೊಂದಿಗೆ ಆಯಕಟ್ಟಿನ ಖಾತೆಗಳನ್ನು ಪಡೆದು ರಾರಾಜಿಸತೊಡಗಿದರು. ಜನಾಗ್ರಹಕ್ಕೆ ಮಣಿದು ಅಕ್ರಮ ಗಣಿ ವ್ಯವಹಾರಗಳಿಗೆ ಕಡಿವಾಣ ಹಾಕಲೆತ್ನಿಸಿದ ಯಡಿಯೂರಪ್ಪನವರನ್ನು ಶೋಭಾ ಕಾರಣ ಮುಂದಿಟ್ಟುಕೊಂಡು ಹಣಿದರು. ವಿಧಾನ ಮಂಡಲವಂತೂ ರೆಡ್ಡಿಗಳ ಆರ್ಭಟಕ್ಕೆ ಮೂಕ ಸಾಕ್ಷಿಯಾಗಿ ನಲುಗಿತು. ಅವರಾಡಿದ ಒಂದು ಮಾತು ಬಳ್ಳಾರಿಯ ತನಕ ಕಾಂಗ್ರೆಸ್ ನಾಯಕರ ಪಾದಯಾತ್ರೆಗೆ ಕಾರಣವಾಯಿತು.
ಅಂತೂ ಇಂತೂ ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿ ಹೊರಬಂದು ಯಡಿಯೂರಪ್ಪ ಅಧಿಕಾರ ತ್ಯಜಿಸಲೇಬೇಕಾಗಿ ಬಂದಾಗ ರೆಡ್ಡಿ ಸಹೋದರರು ನಿರ್ಗಮಿಸಲೇಬೇಕಾಯಿತು. ಅಧಿಕಾರ ವಂಚಿತರಾಗಿ ಸುಮ್ಮನೇ ಕೂರುವ ಜಾಯಮಾನದವರಲ್ಲ ರೆಡ್ಡಿ ಬ್ರದರ್ಸ್. ಅತ್ತ ಬಿಜೆಪಿಯಲ್ಲಿ ಒತ್ತಡದ ರಾಜಕಾರಣ ಮಾಡುತ್ತಿದಂತೆ ಇತ್ತ ಜೆಡಿಎಸ್ ನೊಂದಿಗೆ ಸೀಟು ಹಂಚಿಕೆಯ ಚೌಕಾಸಿ ವ್ಯವಹಾರ ಆರಂಭಿಸಿದ್ದರು. ತಮ್ಮ ರಾಜಕೀಯ ಚದುರಂಗದಾಟದ ಮೊದಲ ದಾಳವಾಗಿ ಶ್ರೀರಾಮುಲು ಅವರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ಸ್ವಾಭಿಮಾನಿ ಯಾತ್ರೆಯ ಹವಣಿಕೆಯಲ್ಲಿದ್ದಾಗಲೇ ಸಿಬಿಐ ಜನಾರ್ದನರೆಡ್ಡಿಯ ಬಂಧನಕ್ಕೆ ಬಲೆ ಬೀಸಿ ಯಶಸ್ವಿಯಾಯಿತು.
ರಾಜ್ಯದ ಹಿರಿಯ ರಾಜಕಾರಣಿಯೊಬ್ಬರು ಹೇಳುತ್ತಿದ್ದ ಒಂದು ಮಾತು ಪದೇ ಪದೇ ನೆನಪಿಗೆ ಬರುತ್ತದೆ. ಹಣ ಇದ್ದವರೆಲ್ಲ ರಾಜಕಾರಣ ಮಾಡಲು ಸಾಧ್ಯವಿಲ್ಲ ಹಾಗಿದ್ದರೇ ಟಾಟಾ ಬಿರ್ಲರೇ ಈ ನಾಡಿನ ಪ್ರಧಾನಿ, ರಾಷ್ಟ್ರಾಧ್ಯಕ್ಷರಾಗುತ್ತಿದ್ದರು.
ಆದರೇ ಹಣ ಇಲ್ಲದವರು ಅಕ್ರಮ ರೀತಿಯಲ್ಲಿ ಹಣ ಗಳಿಸಿ ಚುನಾವಣೆಯಲ್ಲಿ ನೀರಿನಂತೆ ಚೆಲ್ಲಿ ಅಧಿಕಾರ ಗಳಿಸಿಕೊಂಡು ರಾಜಕಾರಣ ಮಾಡಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆ ಸ್ವಯಂ ರೆಡ್ಡಿ ಸಹೋದರರು.
Editor Sir,
ಪ್ರತ್ಯುತ್ತರಅಳಿಸಿThere was a mistake in the second para.
Rajashejarareddyyavara sarkarada pathanavadananthara anthide. Adu vastavavagi Rajashekarareddyyavara akalika saavina nanthara endagabeka. thappigagi vishdisuthene.- Siddartha.